ಶಿರಸಿ: ಮಲೆನಾಡು, ಕರಾವಳಿ ಪರಸರ, ಮೀನುಗಾರರು ಹಾಗೂ ರೈತರ ಬದುಕಿಗೆ ಮಾರಕವಾದ ಬೇಡ್ತಿ, ಅಘನಾಶಿನಿ, ಗಂಗಾವಳಿ ನದಿ ಜೋಡಣೆ ಯೋಜನೆಯ ಡಿಪಿಆರ್ ನಿಲ್ಲಿಸಿ, ಸರ್ವೆ ಟೆಂಡರ್ ರದ್ದುಗೊಳಿಸಲು ಆಗ್ರಹಿಸಿ, ಕಾರವಾರ ಚಲೋ ಜಾಥಾವನ್ನು ಸೆ. 3ರಂದು ಹಮ್ಮಿಕೊಳ್ಳಲಾಗಿದೆ ಎಂದು ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾಧಿಕಾರಿ ಅನಂತ ಅಶೀಸರ ತಿಳಿಸಿದರು.
ಅವರು ಶುಕ್ರವಾರ ನಗರದ ಯೋಗ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೇಡ್ತಿ ವರದಾ ಜೋಡಣೆ ನೀರೇ ಇಲ್ಲದ ನೀರಾವರಿ ಯೋಜನೆಯಾಗಿದ್ದು, ಯಲ್ಲಾಪುರ, ಶಿರಸಿ ತಾಲೂಕುಗಳ ಪಟ್ಟಣದಹೊಳೆ, ಶಾಲ್ಮಲಾ, ಬೇಡ್ತಿ ನದಿಗಳ ನೀರು ಸ್ಥಳೀಯರ ಬಳಕೆಗೆಬೇಕು. ಮಾಗೋಡು ಜಲಪಾತ ನಂತರ ಬೇಡ್ತಿ, ಗಂಗಾವಳಿ ನದಿ ಕರೆಸಿಕೊಂಡಿದೆ. ಗಂಗಾವಳಿ ನದಿಯಿಂದ ಕಾಳಿ ಪುನರ್ ವಸತಿಗೆ ಒಳಗಾದ ಹಳ್ಳಿಗಳಿಗೆ, ಗೋಕಾರ್ಣಕ್ಕೆ, ಅಂಕೋಲಾಕ್ಕೆ, ಕಾರವಾರ ಹಾಗೂ ನೌಕಾನೆಲೆಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಇತ್ತೀಚಿನ ಹಲವು ವರ್ಷಗಳಲ್ಲಿ ಬೇಸಿಗೆಯಲ್ಲಿ ಗಂಗಾವಳಿ ನದಿ ಪೂರ್ಣ ಬರಿದಾಗುತ್ತಿದೆ. ಅಂಕೋಲಾ ತಾಲೂಕಿನ ರೈತರು ಮೀನುಗಾರರು ಗಂಗಾವಳಿ ನದಿಯನ್ನೇ ನಂಬಿಕೊಂಡಿದ್ದಾರೆ. ಬೇಡ್ತಿ ವರದಾ ಯೋಜನೆ ಜಾರಿಯಾದರೆ ಕಾರವಾರ, ಅಂಕೋಲಾ, ಕುಮಟಾ ತಾಲೂಕುಗಳ ಜನತೆ ತೀವ್ರ ಜಲ ಸಂಕಷ್ಟಕ್ಕೆ ಒಳಗಾಗುತ್ತಾರೆ. ಈ ಹಿನ್ನೆಲೆಯಲ್ಲಿ ನದಿ ಜೋಡಣೆ ಯೋಜನೆ ವಿರುದ್ಧ ಹಕ್ಕೋತ್ತಾಯ ಮಾಡಲಾಗುತ್ತಿದೆ ಎಂದರು.
ಗೋಕರ್ಣ ಭಾಗದ ಜನತೆಯ ಜೊತೆ ಜಾಥಾ ತಂಡ ಸೆ.3ರಂದು ಬೆಳಿಗ್ಗೆ 10ಗಂಟೆಗೆ ಸಭೆ ನಡೆಸಿ, ಗೋಕರ್ಣ ಗ್ರಾಪಂಗೆ ಹಕ್ಕೋತ್ತಾಯದ ಮನವಿ ಸಲ್ಲಿಸಲಾಗುವುದು. ನಂತರ ಗಂಗಾವಳಿ ಉಳಿಸಿ ಜಾಥಾ ಕಾರವಾರಕ್ಕೆ ತಲುಪಿ 12.30 ಗಂಟೆಗೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಪಶ್ಚಿಮ ಘಟ್ಟ, ನದಿ ಕಣಿವೆ ಉಳಿಸಿ ಬೇಡಿಕೆ ಮಂಡಿಸಲಾಗುತ್ತದೆ. ಬೇಡ್ತಿ-ಅಘನಾಶಿನಿ ನದಿ ಉಳುವಿಗೆ ವರ್ಷ ನಡೆದ ಜನಾಂದೋಲನಕ್ಕೆ ಸರ್ಕಾರ ಪ್ರತಿಕ್ರಿಯೆ ನೀಡಬೇಕು ಎಂದು ಜಿಲ್ಲೆಯ ಜನತೆ ಒತ್ತಾಯಿಸಲಿದ್ದಾರೆ. ಗಂಗಾವಳಿ ಕರಾವಳಿ ರಕ್ಷಿಸಿ ಹೋರಾಟಗಾರರ ಜತೆ ಮಧ್ಯಾಹ್ನ 3.30 ಗಂಟೆಗೆ ಅಂಕೋಲಾ ತಾಪಂ ಕಚೇರಿ ಬಳಿ ಸಭೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. ಮೀನುಗಾರರು, ರೈತರು, ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ಜನಾಂದೋಲನದಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿದರು.
ಕೊಳ್ಳ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ಈಗಾಗಲೇ ಸಚಿವರು, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು ಸೇರಿದಂತೆ ವಿವಿಧ ಸ್ತರದ ಜನಪ್ರತಿನಿಧಿಗಳನ್ನು ಭೇಟಿಯಾಗಿ ಜನಾಂದೋಲನದಲ್ಲಿ ಪಾಲ್ಗೊಳ್ಳಲು ವಿನಂತಿಸಿದ್ದಾರೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಸಂಚಾಲಕ ವಿ.ಎಂ.ಭಟ್ಟ ಮಾತನಾಡಿ, ಘಟ್ಟದ ಮೇಲಿನ ನದಿ ತಿರುವು ಯೋಜನೆ ಜಾರಿಯಾದರೆ
ಸಿಬರ್ಡ್ ನೌಕಾನೆಲೆ ಮತ್ತು ಕಾರವಾರ ನಗರಕ್ಕೆ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗುತ್ತದೆ ಎಂಬುದನ್ನು ಅಲ್ಲಿನ ಜನರಿಗೆ ಮನದಟ್ಟು ಮಾಡಲಾಗಿದೆ. ನದಿ ಜೋಡಣೆ ಕೈಬಿಡಬೇಕು ಎಂದು ಸಿಬರ್ಡ್ ನೌಕಾನೆಲೆಯಿಂದಲೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ತಿಳಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಚಾಲಕರಾದ ವಿಶ್ವನಾಥ ಶಿಗೇಹಳ್ಳಿ, ರಮೇಶ ದುಬಾಶಿ, ಜ್ಯೋತಿ ಭಟ್ಟ, ಪ್ರಮೋದ ವೈದ್ಯ ಮತ್ತಿಘಟ್ಟ ಇದ್ದರು.













Leave a Reply