
ಶಿರಸಿ: ಸರ್ವೇ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವಾ ನಿವೃತ್ತಿಯಾಗಿದ್ದ ಇಲ್ಲಿನ ಅಶ್ವಿನಿ ಸರ್ಕಲ್ ನಿವಾಸಿ ರಾಮಚಂದ್ರ ನಾರಾಯಣ ಶೆಟ್ಟಿ (80) ಅವರು ಅನಾರೋಗ್ಯದಿಂದ ಸೆಪ್ಟೆಂಬರ್ 2 ರಂದು ಮಧ್ಯಾಹ್ನ ನಿಧನರಾದರು.
ಮೂಲತಃ ಹೊನ್ನಾವರ ತಾಲೂಕಿನ ಕರ್ಕಿಯವರಾದ ರಾಮಚಂದ್ರ ಶೆಟ್ಟಿ ಅವರು ಸರ್ವೆ ಇಲಾಖೆಯಲ್ಲಿ ಸುದೀರ್ಘ 35 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಶಿರಸಿ, ಕಾರವಾರ, ಕುಮಟಾ, ಕುಂದಾಪುರ, ಮುಲ್ಕಿ, ಬಳ್ಳಾರಿ ಹಾಗೂ ಹಾಸನದಲ್ಲಿ ಕರ್ತವ್ಯ ನಿರ್ವಹಿಸಿ, ಸಹಾಯಕ ನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದರು. ಸಾತ್ವಿಕ ಸ್ವಭಾವದವರಾಗಿದ್ದ ಇವರು, ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಭಕ್ತಿ ಹೊಂದಿದ್ದರು. ಸರ್ಕಾರಿ ಸೇವೆಯಲ್ಲಿದ್ದ ಅವಧಿಯಲ್ಲಿ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು.

ಮೃತರು ಪತ್ನಿ, ಹಿರಿಯ ಪತ್ರಕರ್ತರಾಗಿರುವ ಪುತ್ರ ಪ್ರದೀಪ ಶೆಟ್ಟಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಶಿರಸಿ ನಗರದ ನೆಮ್ಮದಿ ರುದ್ರಭೂಮಿಯಲ್ಲಿ ಸೆಪ್ಟೆಂಬರ್ 3 ರಂದು ಬೆಳಿಗ್ಗೆ 8:30 ಕ್ಕೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಗಣ್ಯರ ಸಂತಾಪ:
ರಾಮಚಂದ್ರ ಶೆಟ್ಟಿ ಅವರ ನಿಧನಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಭೀಮಣ್ಣ ನಾಯ್ಕ, ಶಾಸಕ ಶಿವರಾಮ ಹೆಬ್ಬಾರ, ಅರಣ್ಯ ಭೂಮಿ ಅತಿಕ್ರಮಣದಾರ ಹೋರಾಟ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ, ಜೆಡಿಎಸ್ ಜಿಲ್ಲಾ ಮುಖಂಡ ಉಪೇಂದ್ರ ಪೈ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ, ಕೆಪಿಸಿಸಿ ಸದಸ್ಯ ದೀಪಕ ಹೆಗಡೆ ದೊಡ್ಡೂರು ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.













Leave a Reply