ಶಿರಸಿ: ಅಂಕೋಲದಲ್ಲಿ ಸಮುದಾಯದ ಕಾರ್ಯಕ್ರಮದ ಸಂದರ್ಭದಲ್ಲಿ ಪ್ಯಾಲೆಸ್ಟೀನ್ ಧ್ವಜ ಹಾರಿಸಿರುವ ಘಟನೆ ಖಂಡನೀಯವಾಗಿದ್ದು, ಈ ಕೃತ್ಯದ ಹಿಂದೆ ಯಾರದ್ದಾದರೂ ಕುಮ್ಮಕ್ಕು ಇದೆಯೇ ಎಂಬ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ದರ್ಶನ್ ಹೆಗಡೆ ಆಗ್ರಹಿಸಿದ್ದಾರೆ.
ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಇಡೀ ವಿಶ್ವವೇ ಭಾರತವನ್ನು ಒಪ್ಪಿಕೊಂಡು ಅಪ್ಪಿಕೊಳ್ಳುತ್ತಿರುವ ಸಂದರ್ಭದಲ್ಲಿ, ಭಾರತದ ನೆಲದಲ್ಲಿ ವಾಸಿಸುತ್ತಾ ಇಲ್ಲಿನ ಗಾಳಿ, ನೀರು ಹಾಗೂ ಅನ್ನವನ್ನು ಪಡೆದುಕೊಂಡು ಮತ್ತೊಂದು ದೇಶದ ಧ್ವಜ ಹಾರಿಸುವುದು ದೇಶವಿರೋಧಿ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ ಅವರು, ಸಮುದಾಯದ ಕಾರ್ಯಕ್ರಮದ ಸಂದರ್ಭದಲ್ಲಿ ಅನ್ಯ ದೇಶದ ಧ್ವಜ ಹಾರಿಸಿರುವ ಘಟನೆ ಗಂಭೀರವಾಗಿದ್ದು, ಇಂತಹ ಕೃತ್ಯ ಎಸಗಿದವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ರಾಷ್ಟ್ರವಿರೋಧಿ ಮನೋಭಾವ ಹೊಂದಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಅಲ್ಲದೆ, ಈ ಕೃತ್ಯದ ಹಿಂದೆ ಯಾವುದೇ ಸಂಘಟನೆ ಅಥವಾ ವ್ಯಕ್ತಿಗಳ ಪ್ರಚೋದನೆ ಅಥವಾ ಕುಮ್ಮಕ್ಕು ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಿ, ಘಟನೆಯ ಸಂಪೂರ್ಣ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ದರ್ಶನ್ ಹೆಗಡೆ ಆಗ್ರಹಿಸಿದರು.
ಪ್ಯಾಲೆಸ್ಟೀನ್ ಧ್ವಜ ಹಾರಿಸಿದ ಘಟನೆ ಖಂಡನೀಯ: ದರ್ಶನ್ ಹೆಗಡೆ














Leave a Reply