1 ರೂಪಾಯಿಗೆ 80 ರೂ. ಕೊಡುವ ‘ಮಹಾ ದಾನಿ’ ಈಗ ಯಲ್ಲಾಪುರ ಪೊಲೀಸರ ಅತಿಥಿ! ನೋಡಿ ಈ ವರದಿ

ಹಂಚಿಕೊಳ್ಳಿ

ಯಲ್ಲಾಪುರ: ತಾಲೂಕಿನ ಕಿರವತ್ತಿ ಗ್ರಾಮದ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರವಾಗಿ ಓ.ಸಿ ಮಟಕಾ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಯಲ್ಲಾಪುರ ಪೊಲೀಸರು ಬುಧವಾರ (ಆಗಸ್ಟ್ 12) ಸಂಜೆ ಭರ್ಜರಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತೊಬ್ಬ ನಾಪತ್ತೆಯಾಗಿದ್ದಾನೆ.

ಕಾಳಮ್ಮನಗರದ ನಿವಾಸಿ ಅಮೀರ ಶೇಖ (58) ಬಂಧಿತ ಆರೋಪಿಯಾಗಿದ್ದು, ಹೊಸಳ್ಳಿಯ ಪ್ರಕಾಶ ಕಾಂಬಳೆ ಎಂಬ ಇನ್ನೊಬ್ಬ ಆರೋಪಿ ಪೊಲೀಸರನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾನೆ‌

ಘಟನೆಯ ವಿವರ:
ಬಂಧಿತ ಆರೋಪಿ ಅಮೀರ ಶೇಖ ಕಿರವತ್ತಿ ಬಸ್ ನಿಲ್ದಾಣದ ಎದುರು ನಿಂತು ಸಾರ್ವಜನಿಕರಿಗೆ “೧ ರೂಪಾಯಿಗೆ ೮೦ ರೂಪಾಯಿ ಲಾಭ ಕೊಡುವುದಾಗಿ” ಆಸೆ ಆಮಿಷಗಳನ್ನು ಒಡ್ಡಿ, ಕಾನೂನುಬಾಹಿರವಾಗಿ ಮಟಕಾ ಜೂಜಾಟ ಆಡಿಸುತ್ತಿದ್ದನು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಯಲ್ಲಾಪುರ ಪೊಲೀಸ್ ಠಾಣೆಯ ದಕ್ಷ ಪೊಲೀಸ್ ಉಪ ನಿರೀಕ್ಷಕ ಮಹಾದೇವ ಕಾಂಬಳೆ ಮತ್ತು ಸಿಬ್ಬಂದಿಯೊಡನೆ ಪಂಚರ ಸಮ್ಮುಖದಲ್ಲಿ ನಿನ್ನೆ ಸಂಜೆ ೪ ಗಂಟೆ ಸುಮಾರಿಗೆ ದಿಢೀರ್ ದಾಳಿ ನಡೆಸಿದ್ದಾರೆ.

ದಾಳಿಯ ಸಂದರ್ಭದಲ್ಲಿ ಜೂಜಾಟಕ್ಕೆ ಬಳಸುತ್ತಿದ್ದ ₹೧,೪೩೦  ಹಣ, ಸಂಖ್ಯೆಗಳನ್ನು ಬರೆದಿದ್ದ  ಚೀಟಿ ಹಾಗೂ ಒಂದು ಪೆನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು ಮಹಿಳಾ ಹೆಡ್ ಕಾನ್ಸ್‌ಟೇಬಲ್  ರಮಾ ತಾಂಡೇಲ ಅವರು ಪ್ರಕರಣದ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *