ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಹೊಸ ಕೃಷಿ ಸಂಶೋಧನೆಗಳನ್ನು ಬಳಸಿ ಉತ್ತಮ ಇಳುವರಿ ಪಡೆಯಿರಿ: ರಾಮಚಂದ್ರ ಭಟ್ ಕುಂಭತ್ತಿ ಕರೆ

ಹಂಚಿಕೊಳ್ಳಿ

ಯಲ್ಲಾಪುರ: ಇಲ್ಲಿನ ಕೃಷಿ ಇಲಾಖೆ ಹಾಗೂ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ 2025-26ನೇ ಸಾಲಿನ ಆತ್ಮ ಯೋಜನೆಯಡಿ ‘ಸಮಗ್ರ ಕೃಷಿ ಪದ್ಧತಿ ಕ್ಷೇತ್ರ ಪಾಠಶಾಲೆ’ ಎಂಬ ಕಾರ್ಯಕ್ರಮ ಮಾಗೋಡಿನಲ್ಲಿ ಶುಕ್ರವಾರ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಕುಮಟಾ ತೋಟಗಾರಿಕಾ ಇಲಾಖೆಯ ಅಧಿಕಾರಿ ಶಂಕರ ಹೆಗಡೆ ಸಂವಾದ ನಡೆಸಿ ಮಾತನಾಡಿ “ಜಗತ್ತಿನ ಸಮಸ್ತ ಜೀವಿಗಳಿಗೆ ಮಣ್ಣೇ ಆಧಾರ. ಮಣ್ಣಿನ ವಿವಿಧ ಪ್ರಕಾರಗಳು ಹಾಗೂ ಅದರ ಸತ್ವವನ್ನು ವೃದ್ಧಿಸುವ ವಿಧಾನಗಳ ಕಡೆಗೆ ರೈತರು ಗಮನ ಹರಿಸಬೇಕು” ಎಂದು ತಿಳಿಸಿ ಕೃಷಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ತಾಲ್ಲೂಕಿನ 50ಕ್ಕೂ ಹೆಚ್ಚು ಕೃಷಿಕರು ಸಂವಾದದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಮಚಂದ್ರ  ಭಟ್ ಕುಂಭತ್ತಿ ಮಾತನಾಡಿ, “ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಭೂಮಿಯ ಫಲವತ್ತತೆ ಹೆಚ್ಚಿಸುವ ವಿಜ್ಞಾನಿಗಳ ಹೊಸ ಸಂಶೋಧನೆ ಹಾಗೂ ಔಷಧೋಪಚಾರಗಳನ್ನು ರೈತರು ಸಕಾಲದಲ್ಲಿ ಬಳಸಿ ಉತ್ತಮ ಇಳುವರಿ ಪಡೆಯಬೇಕು” ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಕೃಷಿ ಇಲಾಖೆಯ ಎಂ. ಜಿ. ಭಟ್, ರಾಮಚಂದ್ರ ಎನ್ ಭಟ್ಟ ಕಿರಕುಂಭತ್ತಿ, ವೇದಮೂರ್ತಿ ವೆಂಕಟರಮಣ ಭಟ್ಟ ಮೊಟ್ಟೆಗದ್ದೆ , ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೇಘಾ ಮಂಜುನಾಥ್ ಭಟ್ ಕುಂಭತ್ತಿ ಅವರ ಪ್ರಾರ್ಥಿಸಿದರೆ, ಕೃಷಿ ಇಲಾಖೆ ಅಧಿಕಾರಿ ಎಂ. ಜಿ. ಭಟ್ ಇಡುಗುಂದಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ತಿಮ್ಮಣ್ಣ ಭಾಗ್ವತ್ ನಂದೊಳ್ಳಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Leave a Reply

Your email address will not be published. Required fields are marked *