ಯಲ್ಲಾಪುರ:
ತಾಲೂಕಿನ ಮಾಗೋಡ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ವೀರಮಾರುತಿ ತಾಳಮದ್ದಲೆ ಕೂಟದಿಂದ ಆಷಾಢ ಏಕಾದಶಿ ಪ್ರಯುಕ್ತ ನಾಲ್ಕನೇ ವರ್ಷದ ಪ್ರಸಂಗ ಪಂಚಕ ಕಾರ್ಯಕ್ರಮ ಜು.25 ರಂದು ನಡೆಯಲಿದೆ. ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ನಿರಂತರವಾಗಿ 12 ತಾಸುಗಳ ಕಾಲ ತಾಳಮದ್ದಲೆಗಳು ಪ್ರಸ್ತುತಗೊಳ್ಳಲಿವೆ.
ಈ ಬಾರಿ ಕಲ್ಯಾಣ ಪ್ರಸಂಗ ಪಂಚಕ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಐದು ಕಲ್ಯಾಣ ಪ್ರಸಂಗಗಳನ್ನು ಕಲಾವಿದರು ಪ್ರಸ್ತುತಪಡಿಸುವರು. ಯೋಗಿನಿ ಕಲ್ಯಾಣ, ರತಿ ಕಲ್ಯಾಣ, ಶ್ರೀನಿವಾಸ ಕಲ್ಯಾಣ ಕನಕಾಂಗಿ ಕಲ್ಯಾಣ ಹಾಗೂ ಗಿರಿಜಾ ಕಲ್ಯಾಣ ಆಖ್ಯಾನಗಳು ನಡೆಯಲಿವೆ.
ಹಿಮ್ಮೇಳ ಹಾಗೂ ಮುಮ್ಮೇಳದಲ್ಲು ಯಲ್ಲಾಪುರ ಹಾಗೂ ಸುತ್ತಮುತ್ತಲಿನ ಒಟ್ಟು 60 ಕ್ಕೂ ಹೆಚ್ಚು ಕಲಾವಿದರು ಈ ಕಲಾಸೇವೆಯಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ಪ್ರಸಂಗಕ್ಕೂ 2 ತಾಸು 20 ನಿಮಿಷದ ಅವಧಿ ನಿಗದಿಪಡಿಸಲಾಗಿದ್ದು, ಎಲ್ಲಾ ಪ್ರಸಂಗಗಳು ಸಮಯದ ಚೌಕಟ್ಟಿನಲ್ಲಿ, ಕಥೆಗೆ ಯಾವುದೇ ತೊಂದರೆಯಾಗದಂತೆ ಮುಗಿಯುವುದು ಈ ಕಾರ್ಯಕ್ರಮದ ವಿಶೇಷತೆ.
ಕಳೆದ ಮೂರು ವರ್ಷಗಳಿಂದ ಆಷಾಢ ಏಕಾದಶಿಯಂದು ವೀರಮಾರುತಿ ತಾಳಮದ್ದಲೆ ಕೂಟದ ಈ ಕಾರ್ಯಕ್ರಮ ಸಂಘಟನೆ ಕಲಾ ವಲಯದಲ್ಲಿ ವಿಶೇಷ ಮನ್ನಣೆ ಪಡೆದಿದೆ. ಸಮಯದ ಪಾಲನೆ, ಅಚ್ಚುಕಟ್ಟಾದ ವ್ಯವಸ್ಥೆ, ಕಲಾವಿದರಿಗೆ ಹಾಗೂ ಕಲಾಭಿಮಾನಿಗಳಿಗೆ ಆತ್ಮೀಯವಾದ ಆತಿಥ್ಯ, ಕಲಾಸೇವೆಯೊಂದಿಗೆ ಆಷಾಢ ಏಕಾದಶಿಯ ಪರ್ವ ಕಾಲವನ್ನು ಸಾರ್ಥಕಪಡಿಸಿಕೊಳ್ಳುವ ಕಾರ್ಯಕ್ರಮ ಇತರ ಸಂಘಟನೆಗಳಿಗೆ ಮಾದರಿಯಾಗಿದೆ.
ಯಲ್ಲಾಪುರ: ಮಾಗೋಡಿನಲ್ಲಿ ಜು.25 ರಂದು ನಿರಂತರ 12 ಗಂಟೆಗಳ ‘ಕಲ್ಯಾಣ ಪ್ರಸಂಗ ಪಂಚಕ’ ತಾಳಮದ್ದಲೆ














Leave a Reply