ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಸೃಷ್ಟಿಸಬಲ್ಲ ಮಹಾ ರಾಜಕೀಯ ವಿವಾದವೊಂದು ಮುನ್ನೆಲೆಗೆ ಬಂದಿದೆ. ದಾವಣಗೆರೆ ಉಪಚುನಾವಣೆ ವೇಳೆ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರು ಪಕ್ಷದ ವಿರುದ್ಧವೇ ಕೆಲಸ ಮಾಡಿದ್ದಾರಾ ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕುವ ಸ್ಫೋಟಕ ಆಡಿಯೋ ಕ್ಲಿಪ್ ಒಂದು ವೈರಲ್ ಆಗಿದೆ. ಈ ಆಡಿಯೋ ಸಿಎಂ ಸಿದ್ದರಾಮಯ್ಯ ನೇತೃತ್ವದ ಚುನಾವಣಾ ತಂತ್ರಕ್ಕೆ ವಿರುದ್ಧವಾಗಿ ಜಮೀರ್ ಅವರೇ ಷಡ್ಯಂತ್ರ ರೂಪಿಸಿದ್ದನ್ನು ಸಾಬೀತುಪಡಿಸುವಂತಿದೆ ಎಂಬ ಆರೋಪ ಕೇಳಿಬಂದಿದೆ.
ವೈರಲ್ ಆಗಿರುವ ಆಡಿಯೋದಲ್ಲಿ ಜಮೀರ್ ಅಹ್ಮದ್ ಖಾನ್ ಅವರು ಕೆಎಂಡಿಸಿ (KMDC) ನಿರ್ದೇಶಕ ಮೊಹಮ್ಮದ್ ಸಿರಾಜ್ ಜೊತೆ ಮಾತನಾಡಿದ್ದಾರೆ ಎನ್ನಲಾದ ಸಂಭಾಷಣೆ ಇದೆ. ಇದರಲ್ಲಿ, ಎಲ್ಲಾ ಕಡೆ ಕುಕ್ಕರ್ ಗುರುತು (ಪಕ್ಷೇತರ/SDPI) ನಡೀತಿದೆ. ಬಹುತೇಕ ಎಲ್ಲರೂ ಕುಕ್ಕರ್ಗೇ ವೋಟ್ ಹಾಕುತ್ತಿದ್ದಾರೆ” ಎಂದು ಸಿರಾಜ್ ಮತಗಳ ಲೆಕ್ಕಾಚಾರ ಒಪ್ಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಜಮೀರ್, “ಯಾರನ್ನೂ ಬಲವಂತವಾಗಿ ಮತಗಟ್ಟೆಗೆ ಕರೆತರಬೇಡ. ಬಲವಂತವಾಗಿ ಬಂದರೆ ನಮಗೆ ಲಾಭ ಆಗಲ್ಲ. ಮುಸ್ಲಿಂ ಪರ್ಸೆಂಟೇಜ್ ಕಡಿಮೆ ಇದೆ. ಅವರು ಬಲವಂತವಾಗಿ ಹೊರಗೆ ಬಂದರೆ ಕಾಂಗ್ರೆಸ್ಗೇ ಮತ ಹಾಕುತ್ತಾರೆ. ಅವರೆಲ್ಲರಿಗೂ ಕಾಂಗ್ರೆಸ್ಗೆ ವೋಟ್ ಹಾಕಿ ರೂಢಿಯಾಗಿದೆ. ನಾನು ಅವರನ್ನು ನಂಬಲು ಸಾಧ್ಯವಿಲ್ಲ. ಹೀಗಾಗಿ ಎಸ್ಡಿಪಿಐ (SDPI) ಮತ್ತು ಪಕ್ಷೇತರ ಅಭ್ಯರ್ಥಿಗಳಿಗೆ ವೋಟ್ ಹಾಕಿಸು. ಮುಸ್ಲಿಮರು ಮತದಾನಕ್ಕೆ ಹೊರಗೆ ಬರದಿದ್ದರೂ ನಮಗೆ ಒಳ್ಳೆಯದೇ” ಎಂದು ಜಮೀರ್ ಸೂಚನೆ ನೀಡಿದ್ದಾರೆ ಎನ್ನಲಾದ ಲೀಕ್ಡ್ ಆಡಿಯೋ ಈಗ ಕಾಂಗ್ರೆಸ್ ಹೈಕಮಾಂಡ್ಗೆ ತಲೆನೋವಾಗಿ ಪರಿಣಮಿಸಿದೆ.
https://x.com/kannadacocylvb/status/2061211281668124789?s=48&t=NklQzRjkDapYfynmzS3irA
ಬಿಜೆಪಿ ಬೆಂಬಲಿಸಲು SDPI ಜೊತೆ ಕೈಜೋಡಿಸಿದ್ರಾ ಜಮೀರ್?
ದಾವಣಗೆರೆ ಬೈಎಲೆಕ್ಷನ್ನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೋಲನ್ನು ಕಾಣಬೇಕು ಎಂಬ ಉದ್ದೇಶದಿಂದಲೇ ಜಮೀರ್ ಈ ತಂತ್ರ ಹೂಡಿದ್ದರಾ? ಬಿಜೆಪಿ ಅಭ್ಯರ್ಥಿಗೆ ಪರೋಕ್ಷವಾಗಿ ಅನುಕೂಲ ಮಾಡಿಕೊಡಲು ಎಸ್ಡಿಪಿಐ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದರಾ? ಎಂಬ ದಟ್ಟ ಶಂಕೆ ವ್ಯಕ್ತವಾಗಿದೆ. ಜಮೀರ್ ಅವರ ಈ ಒಳಸಂಚಿನ ಮಾಹಿತಿ ಮುಂಚಿತವಾಗಿಯೇ ಸಿಎಂ ಸಿದ್ದರಾಮಯ್ಯ ಅವರಿಗೆ ಸಿಕ್ಕಿತ್ತು ಎನ್ನಲಾಗಿದ್ದು, ಇದೇ ಕಾರಣಕ್ಕೆ ಅವರು ಪರಿಸ್ಥಿತಿ ನಿಭಾಯಿಸಲು ತಕ್ಷಣವೇ ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹ್ಮದ್ ಅವರನ್ನು ದಾವಣಗೆರೆಗೆ ಕಳುಹಿಸಿಕೊಟ್ಟಿದ್ದರು ಎನ್ನಲಾಗಿದೆ.
ದಾವಣಗೆರೆಯಲ್ಲಿ ನಡೆದಿದೆ ಎನ್ನಲಾದ ಈ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷ ಇಬ್ಬರು ಪ್ರಮುಖ ಮುಸ್ಲಿಂ ನಾಯಕರಾದ ಅಬ್ದುಲ್ ಜಬ್ಬಾರ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಕಳೆದುಕೊಂಡಿದ್ದು, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನವನ್ನೂ ತ್ಯಜಿಸಿದ್ದಾರೆ. ಹಾಗೂ ನಸೀರ್ ಅಹಮದ್ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದ್ದು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಲಾಗಿದೆ.
ಈಗ ಆಡಿಯೋ ವೈರಲ್ ಆಗಿ ಸಿಕ್ಕಿಬಿದ್ದಿರುವ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧವೂ ಶಿಸ್ತುಕ್ರಮದ ತೂಗುಗತ್ತಿ ನೇತಾಡುತ್ತಿದೆ. ಭವಿಷ್ಯದಲ್ಲಿ ದೊಡ್ಡ ಸಚಿವ ಸ್ಥಾನ ಅಥವಾ ಉಪಮುಖ್ಯಮಂತ್ರಿ (DCM) ಹುದ್ದೆಯ ಕನಸು ಕಾಣುತ್ತಿದ್ದ ಜಮೀರ್ಗೆ ಈ ಆಡಿಯೋ ಬಾಂಬ್ ಚೇತರಿಸಿಕೊಳ್ಳಲಾಗದಷ್ಟು ದೊಡ್ಡ ಶಾಕ್ ನೀಡಿದೆ.

Leave a Reply