ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಕರೂರು ಮತ್ತು ಭಾರಂಗಿ ಹೋಬಳಿಯ ದ್ವೀಪದ ಜನರನ್ನು ಹೊರಜಗತ್ತಿಗೆ ಬೆಸೆದ ಐತಿಹಾಸಿಕ ‘ಸಿಗಂದೂರು ಸೇತುವೆ’ ಉದ್ಘಾಟನೆಗೊಂಡು ಯಶಸ್ವಿ ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಶರಾವತಿ ನದಿ ತೀರದ ನಿವಾಸಿಗಳು ಹಾಗೂ ಸ್ಥಳೀಯರು ಭರ್ಜರಿ ಸಂಭ್ರಮಾಚರಣೆ ಮಾಡುವ ಮೂಲಕ ತಮ್ಮ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ಸೋಮವಾರ ರಾತ್ರಿ ಸೇತುವೆಯ ಮೇಲೆ ಜಮಾಯಿಸಿದ ನೂರಾರು ಜನ ಸ್ಥಳೀಯರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ದಶಕಗಳ ಕಾಲ ದ್ವೀಪದಂತಿದ್ದ ತಮ್ಮ ಊರುಗಳಿಗೆ ಸುಸಜ್ಜಿತ ಸಂಪರ್ಕ ಕಲ್ಪಿಸಿದ ಈ ಸೇತುವೆ, ಈ ಭಾಗದ ಜನರ ಪಾಲಿಗೆ ಬಹುಮುಖ್ಯವಾದ ಜೀವನಾಡಿಯಾಗಿದೆ. ಇದೇ ಕಾರಣಕ್ಕೆ ಸೇತುವೆ ಉದ್ಘಾಟನೆಯಾಗಿ ಒಂದು ವರ್ಷ ಕಳೆದರೂ ಅದರ ವಾರ್ಷಿಕೋತ್ಸವವನ್ನು ಹಬ್ಬದಂತೆ ಆಚರಿಸುವ ಮೂಲಕ ಶರಾವತಿ ಎಡದಂಡೆಯ ಜನರು ಕೇಂದ್ರ ಸರ್ಕಾರಕ್ಕೆ ವಿಶೇಷ ಧನ್ಯವಾದ ಅರ್ಪಿಸುತ್ತಿದ್ದಾರೆ.
ಕಳೆದ ವರ್ಷ ಜುಲೈ 14ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಈ ಬೃಹತ್ ಸೇತುವೆಯನ್ನು ಲೋಕಾರ್ಪಣೆ ಮಾಡಿದ್ದರು. ದೇಶದ ಎರಡನೇ ಅತಿ ಉದ್ದದ ಕೇಬಲ್ ಆಧಾರಿತ ಸೇತುವೆ (Cable-stayed bridge) ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಿಗಂದೂರು ಸೇತುವೆಯು ಪ್ರವಾಸೋದ್ಯಮದ ಜೊತೆಗೆ ಸ್ಥಳೀಯರ ದೈನಂದಿನ ಬದುಕಿನಲ್ಲಿ ಬಹುದೊಡ್ಡ ಬದಲಾವಣೆಯನ್ನು ತಂದಿದೆ.

Leave a Reply