ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಗೊಲ್ಲರಕೊಪ್ಪಲು ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ರೈತರ ನಿದ್ದೆಗೆಡಿಸಿದ್ದ ಚಿರತೆಯೊಂದು ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಗ್ರಾಮದ ರೈತ ಶಿವಣ್ಣ ಎಂಬುವವರ ಜಮೀನಿನಲ್ಲಿ ಇರಿಸಲಾಗಿದ್ದ ಬೋನಿನಲ್ಲಿ ಈ ಚಿರತೆ ಲಾಕ್ ಆಗಿದ್ದು, ಸದಾ ಆತಂಕದಲ್ಲಿದ್ದ ಸ್ಥಳೀಯರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಈ ಭಾಗದಲ್ಲಿ ಚಿರತೆಯು ಜಾನುವಾರುಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಾ ಭಾರಿ ಭೀತಿ ಸೃಷ್ಟಿಸಿತ್ತು. ರೈತರ ಸರಣಿ ದೂರಿನ ಮೇರೆಗೆ ಕಾರ್ಯಾಚರಣೆಗಿಳಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆ ಸೆರೆಹಿಡಿಯಲು ಜಮೀನಿನಲ್ಲಿ ಬೋನ್ ಇಟ್ಟಿದ್ದರು. ನಾಯಿಯನ್ನು ತಿನ್ನುವ ಆಸೆಗೆ ಬೋನಿನ ಬಳಿ ಬಂದ ಚಿರತೆಯು ಕೊನೆಗೂ ಲಾಕ್ ಆಗಿದೆ.
ಬಹಳ ದಿನಗಳಿಂದ ಕಾಡುತ್ತಿದ್ದ ಚಿರತೆಯ ಸೆರೆಯಿಂದಾಗಿ ಗೊಲ್ಲರಕೊಪ್ಪಲು, ತೆಂಗಿನಘಟ್ಟ, ಕಾಳೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ಸಾರ್ವಜನಿಕರು ಭಯದಿಂದ ಮುಕ್ತರಾಗಿದ್ದಾರೆ.

Leave a Reply