ನಿಮ್ಮ ಮನೆಯ ಅಡುಗೆಮನೆಯಿಂದ ಪ್ರತಿದಿನ ಹೊರಹೊಮ್ಮುವ ಘಮಘಮಿಸುವ ಅಡುಗೆಯ ವಾಸನೆ ನಿಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತಿವೆ ಇತ್ತೀಚಿನ ಆಘಾತಕಾರಿ ಸಂಶೋಧನಾ ವರದಿಗಳು! ಮಾರುಕಟ್ಟೆಯಲ್ಲಿ ಗಗನಕ್ಕೇರುತ್ತಿರುವ ಅಡುಗೆ ಎಣ್ಣೆಯ ಬೆಲೆಯನ್ನು ಬಂಡವಾಳ ಮಾಡಿಕೊಂಡಿರುವ ಕೆಲವು ಖದೀಮರು, ಸಾರ್ವಜನಿಕರ ಜೀವದ ಜೊತೆ ಭೀಕರ ಚೆಲ್ಲಾಟವಾಡುತ್ತಿದ್ದಾರೆ. ಹೆಚ್ಚಿನ ಲಾಭದ ಆಸೆಗೆ ಬಿದ್ದು ನಾವು ದಿನನಿತ್ಯ ಬಳಸುವ ಶೇಂಗಾ, ಸೂರ್ಯಕಾಂತಿ ಹಾಗೂ ಸಾಸಿವೆ ಎಣ್ಣೆಗಳಿಗೆ ಪ್ರಾಣಾಂತಿಕ ರಾಸಾಯನಿಕ ಹಾಗೂ ಅಗ್ಗದ ತೈಲಗಳನ್ನು ಯದ್ವಾತದ್ವಾ ಮಿಶ್ರಣ ಮಾಡುತ್ತಿರುವ ಕರಾಳ ದಂಧೆ ರಾಜಾರೋಷವಾಗಿ ನಡೆಯುತ್ತಿದೆ.

ಲಾಭದ ಆಸೆಗೆ ವಿಷದ ಮಿಶ್ರಣ: ಎಣ್ಣೆಯಲ್ಲಿ ಏನೆಲ್ಲಾ ಇರುತ್ತೆ?ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಡೆಸಿರುವ ಪರೀಕ್ಷೆಗಳ ಪ್ರಕಾರ, ಮಾರುಕಟ್ಟೆಯಲ್ಲಿ ಸಿಗುವ ಶೇ. ೩೦ ಕ್ಕೂ ಹೆಚ್ಚು ಬ್ರ್ಯಾಂಡ್ಗಳ ಎಣ್ಣೆಯಲ್ಲಿ ತೀವ್ರ ಕಳಬೆರಕೆ ಪತ್ತೆಯಾಗಿದೆ.
ಶುದ್ಧ ಶೇಂಗಾ ಮತ್ತು ಸೂರ್ಯಕಾಂತಿ ಎಣ್ಣೆಗಳ ಹೆಸರಿನಲ್ಲಿ ಮಾರಾಟವಾಗುವ ಪ್ಯಾಕೆಟ್ಗಳಲ್ಲಿ ಶೇ. ೩೦ ರಿಂದ ಭರ್ತಿ ಶೇ. ೭೦ ರಷ್ಟು ಅಗ್ಗದ ಪಾಮ್ ಆಯಿಲ್ ಅನ್ನು ಬೆರೆಸಿ ಗ್ರಾಹಕರ ಕಣ್ಣಿಗೆ ಮಣ್ಣೆರಚಲಾಗುತ್ತಿದೆ.

ಅರ್ಜಿಮೋನ್ ಎಂಬ ಮೃತ್ಯು ತೈಲ:
ಸಾಸಿವೆ ಎಣ್ಣೆಯ ತೀಕ್ಷ್ಣತೆಯನ್ನು ಹೆಚ್ಚಿಸಲು ಅದಕ್ಕೆ ಮುಳ್ಳುದಂಟಿನ ಬೀಜದಿಂದ ತಯಾರಾಗುವ ಅತ್ಯಂತ ವಿಷಕಾರಿ ‘ಅರ್ಜಿಮೋನ್ ಎಣ್ಣೆ’ಯನ್ನು ಶೇ. ೫ ರಿಂದ ೨೦ ರಷ್ಟು ಮಿಶ್ರಣ ಮಾಡಲಾಗುತ್ತಿದೆ. ಎಣ್ಣೆಗೆ ಹೆಚ್ಚಿನ ಸಾಂದ್ರತೆ ಮತ್ತು ಹೊಳಪು ನೀಡಲು ಪೆಟ್ರೋಲಿಯಂ ಉಪ ಉತ್ಪನ್ನವಾದ ಮಿನರಲ್ ಆಯಿಲ್ (ಖನಿಜ ತೈಲ) ಮತ್ತು ಹರಳೆಣ್ಣೆಯನ್ನು ಶೇ. ೧೦ ರಿಂದ ೩೦ ರಷ್ಟು ಬಳಸಲಾಗುತ್ತಿದೆ.
ಹೃದಯಾಘಾತದಿಂದ ಕ್ಯಾನ್ಸರ್ವರೆಗೆ:
ಆರೋಗ್ಯಕ್ಕೆ ಕಾದಿದೆ ಕಂಟಕ!
ಈ ಕಳಬೆರಕೆ ಎಣ್ಣೆಯ ನಿರಂತರ ಸೇವನೆಯು ಮನುಷ್ಯನ ದೇಹದ ಪ್ರಮುಖ ಅಂಗಾಂಗಗಳನ್ನು ನಿಧಾನವಾಗಿ ನಿಷ್ಕ್ರಿಯಗೊಳಿಸುತ್ತಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಪಾಮ್ ಆಯಿಲ್ನಲ್ಲಿರುವ ಸ್ಯಾಚುರೇಟೆಡ್ ಕೊಬ್ಬು ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL) ಆಗಿ ಜಮೆಯಾಗುತ್ತದೆ. ಇದು ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಮತ್ತು ಪಾರ್ಶ್ವವಾಯು (Stroke) ಕಾಯಿಲೆಗೆ ನೇರ ಕಾರಣವಾಗಿದೆ. ಸಾಸಿವೆ ಎಣ್ಣೆಯಲ್ಲಿರುವ ಅರ್ಜಿಮೋನ್ ಅಂಶವು ದೇಹ ಸೇರಿದರೆ ‘ಎಪಿಡೆಮಿಕ್ ಡ್ರಾಪ್ಸಿ’ ಎಂಬ ಭೀಕರ ರೋಗ ಬರುತ್ತದೆ. ಇದರಿಂದ ಇಡೀ ದೇಹದಲ್ಲಿ ನೀರು ತುಂಬಿಕೊಂಡು ಊದಿಕೊಳ್ಳುವುದು ಹಾಗೂ ಹೃದಯ ವೈಫಲ್ಯ ಸಂಭವಿಸುತ್ತದೆ. ಇದು ಕಣ್ಣಿನ ಗ್ಲುಕೋಮಾ ಕಾಯಿಲೆ ತಂದುಕೊಟ್ಟು ಮನುಷ್ಯನನ್ನು ಶಾಶ್ವತ ಕುರುಡನನ್ನಾಗಿ ಮಾಡುತ್ತದೆ. ಮಿನರಲ್ ಆಯಿಲ್ ಮತ್ತು ಎಣ್ಣೆಗೆ ಆಕರ್ಷಕ ಬಣ್ಣ ನೀಡಲು ಬಳಸುವ ಸಿಂಥೆಟಿಕ್ ಬಣ್ಣಗಳಲ್ಲಿ ‘ಕಾರ್ಸಿನೋಜೆನಿಕ್’ (ಕ್ಯಾನ್ಸರ್ ಕಾರಕ) ಅಂಶಗಳಿರುತ್ತವೆ. ಇವು ಹೊಟ್ಟೆ, ಕರುಳು ಮತ್ತು ಪಿತ್ತಕೋಶದ ಕ್ಯಾನ್ಸರ್ಗೆ ದಾರಿ ಮಾಡಿಕೊಡುತ್ತವೆ.ಹರಳೆಣ್ಣೆ ಮಿಶ್ರಿತ ತೈಲಗಳು ಜೀರ್ಣಾಂಗ ವ್ಯವಸ್ಥೆಯನ್ನು ಧ್ವಂಸಗೊಳಿಸುತ್ತವೆ. ಇವುಗಳನ್ನು ಪ್ರತಿದಿನ ಸೇವಿಸುವುದರಿಂದ ಲಿವರ್ ಸಿರೋಸಿಸ್ ಹಾಗೂ ಮೂತ್ರಪಿಂಡ (ಕಿಡ್ನಿ) ಸಂಪೂರ್ಣ ಫೇಲ್ಯೂರ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
ಜಾಗೃತಿಯೇ ಏಕೈಕ ಮದ್ದು!
ಕಡಿಮೆ ಬೆಲೆಗೆ ಸಿಗುತ್ತದೆ ಎಂದು ರಸ್ತೆ ಬದಿಯ ಲೂಸ್ ಎಣ್ಣೆ ಅಥವಾ ಬ್ರ್ಯಾಂಡ್ ಇಲ್ಲದ ಎಣ್ಣೆಗಳನ್ನು ಖರೀದಿಸುವುದನ್ನು ಗ್ರಾಹಕರು ಸಂಪೂರ್ಣ ನಿಲ್ಲಿಸಬೇಕು. ಯಾವುದೇ ಎಣ್ಣೆ ಖರೀದಿಸುವ ಮುನ್ನ ‘FSSAI’ ಮುದ್ರೆ ಹಾಗೂ ಅಗಮಾರ್ಕ್ (AGMARK) ಪ್ರಮಾಣಪತ್ರ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಾಧ್ಯವಾದರೆ ಕಣ್ಣೆದುರೇ ಗಾಣದಿಂದ ಹಿಂಡಿದ ಶುದ್ಧ ಎಣ್ಣೆಯನ್ನು ಬಳಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ. ಆಹಾರ ಸುರಕ್ಷತಾ ಇಲಾಖೆಯು ಇಂತಹ ನಕಲಿ ಜಾಲಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸದಿದ್ದರೆ, ಜನರ ಆರೋಗ್ಯ ಸ್ಥಿತಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕಳವಳಕಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಹಳ್ಳಿಯಲ್ಲೆ ಸಿಗಲಿದೆ ಗಾಣದ ಎಣ್ಣೆ
ಇನ್ನು ಹಳ್ಳಿಗಳಲ್ಲಿ ಗಾಣದಲ್ಲೆ ಎಣ್ಣೆ ತೆಗೆಯುವ ಸಾಂಪ್ರದಾಯಿಕ ವ್ಯವಸ್ಥೆ ಇಂದಿಗೂ ಜೀವಂತವಾಗಿದೆ. ತೆಂಗಿನ ಎಣ್ಣೆ, ಕೊಬ್ಬರಿ ಎಣ್ಣೆ , ಶೆಂಗಾ ಎಣ್ಣೆಗಳನ್ನು ನಾವು ಪ್ರತಿನಿತ್ಯ ಅಡಿಗೆಯಲ್ಲಿ ಬಳಸಿದರೆ ಹಲವು ರೋಗಗಳಿಂದ ಪಾರಾಗುದಂತು ಸತ್ಯ. ಇತ್ತಿಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕರಿದ ಪದಾರ್ಥಗಳನ್ನು ತಿನ್ನುವಾಗ ಹತ್ತು ಬಾರಿ ಯೋಚಿಸಬೇಕಾಗಿದೆ. ಅಲ್ಲಿ ಬಳಸುವ ಎಣ್ಣೆಗಳ ಗುಣಮಟ್ಟವನ್ನು ಅರಿತು ನಾವು ಅರಿತು ಸೇವಿಸಬೇಕೊ ಬೇಡವೊ ಎಂಬುದ ತಿರ್ಮಾನಿಸಬೇಕು. ಒಟ್ಟಿನಲ್ಲಿ ಹಲವಾರು ರೋಗಗಳಿಗೆ, ಇತ್ತಿಚಿನ ಕೆಲವು ನಕಲಿ ಅಡುಗೆ ಎಣ್ಣೆಯೆ ಕಾರಣವಾಗಿದೆ. ಈ ಬಗ್ಗೆ ಜಾಗೃತರಾಗಿ ಆರೋಗ್ಯವಂತರಾಗಿರೋಣ ಎಂಬುದೇ ಈ ವರದಿಯ ಆಶಯವಾಗಿದೆ.




Leave a Reply