ಬೆಂಗಳೂರು ನಗರದ ರಸ್ತೆ ಬದಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಾಥವಾಗಿ ನಿಲ್ಲಿಸಿರುವ ವಾಹನಗಳ ತೆರವು ಕಾರ್ಯಾಚರಣೆಗೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ.
ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ಕ್ವೀನ್ಸ್ ರಸ್ತೆಯ ಶಿಪಾ ಆಸ್ಪತ್ರೆ ಬಳಿ ಈ ಮಹತ್ವದ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ನಗರದ ಸಂಚಾರ ದಟ್ಟಣೆ ಮತ್ತು ಸೌಂದರ್ಯಕ್ಕೆ ಧಕ್ಕೆ ತರುತ್ತಿರುವ ಇಂತಹ ವಾಹನಗಳನ್ನು ತೆರವುಗೊಳಿಸಲು ಆಡಳಿತ ಮಂಡಳಿ ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ರಸ್ತೆಗಳನ್ನು ಅತಿಕ್ರಮಿಸಿರುವ ಗುಜರಿ ವಾಹನಗಳಿಗೆ ಮುಕ್ತಿ ಸಿಗಲಿದೆ.
ರಸ್ತೆ ಬದಿಗಳಲ್ಲಿ ದೀರ್ಘಕಾಲದಿಂದ ನಿಲ್ಲಿಸಿರುವ ವಾಹನಗಳನ್ನು ಗುರುತಿಸಿ, ಅವುಗಳ ಮೇಲೆ ಅಧಿಕಾರಿಗಳು ಮೊದಲು ಸ್ಟಿಕ್ಕರ್ ಅಳವಡಿಸಲಿದ್ದಾರೆ. ಸ್ಟಿಕ್ಕರ್ ಅಳವಡಿಸುವ ಮೂಲಕ ವಾಹನಗಳನ್ನು ಗುರುತಿಸಿದ ಬಳಿಕ, ಸಂಬಂಧಪಟ್ಟ ಮಾಲೀಕರಿಗೆ ತಮ್ಮ ವಾಹನ ತೆರವುಗೊಳಿಸಲು ಕೇವಲ 1 ವಾರದ ಕಾಲಾವಕಾಶ ನೀಡಲಾಗುತ್ತದೆ. ಒಂದು ವೇಳೆ ನಿಗದಿತ ಸಮಯದೊಳಗೆ ಮಾಲೀಕರು ಎಚ್ಚೆತ್ತುಕೊಂಡು ವಾಹನಗಳನ್ನು ತೆರವು ಮಾಡದಿದ್ದರೆ, ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಬಹಿರಂಗ ಹರಾಜು ಹಾಕಲಾಗುವುದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

Leave a Reply