
ಶಿರಸಿ: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 3ರಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಾಳಿಗೆ ತೂರಿ, ಅವರಿಂದ ಅಪಾಯಕಾರಿ ಮೇಲ್ಛಾವಣಿ ಸ್ವಚ್ಛಗೊಳಿಸಿರುವ ಕೆಲಸ ಮಾಡಿಸಿದ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಶಾಲಾ ಶಿಕ್ಷಕರ ಈ ಬೇಜವಾಬ್ದಾರಿತನದ ನಡೆಗೆ ಪೋಷಕರು ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಶಾಲೆಯ ಹಂಚಿನ ಮೇಲ್ಛಾವಣಿ ಮಳೆಗಾಲವಾಗಿದ್ದರಿಂದ ಅತ್ಯಂತ ಜಾರುವ ಸ್ವಭಾವದ್ದಾಗಿದ್ದು, ಯಾವುದೇ ಮುನ್ನೆಚ್ಚರಿಕೆ ಕ್ರಮಗಳಿಲ್ಲದೆ ಮಕ್ಕಳನ್ನು ಅದರ ಮೇಲೆ ಹತ್ತಿಸಿ ಸ್ವಚ್ಛತಾ ಕಾರ್ಯ ಮಾಡಿಸಲಾಗಿದೆ ಎನ್ನಲಾಗಿದೆ. ಸಣ್ಣ ತಪ್ಪು ಸಂಭವಿಸಿದರೂ ಮಕ್ಕಳ ಜೀವಕ್ಕೆ ಆಪತ್ತು ಬರುವ ಸಾಧ್ಯತೆ ಇದ್ದಿದ್ದರಿಂದ, ಈ ದೃಶ್ಯವನ್ನು ಕಂಡ ಸ್ಥಳೀಯರು ಮತ್ತು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. “ಒಂದು ವೇಳೆ ಮಗು ಕಾಲು ಜಾರಿ ಬಿದ್ದಿದ್ದರೆ ಇದಕ್ಕೆ ಯಾರು ಹೊಣೆ?” ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಮಕ್ಕಳ ರಕ್ಷಣೆ ಮತ್ತು ಶಾಲಾ ನಿಯಮಾವಳಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಈ ಘಟನೆಯನ್ನು ಶಿಕ್ಷಣ ಇಲಾಖೆಯು ಗಂಭೀರವಾಗಿ ಪರಿಗಣಿಸಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತಕ್ಷಣವೇ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಮತ್ತು ಮಕ್ಕಳ ಜೀವದ ಜೊತೆ ಚೆಲ್ಲಾಟವಾಡಿರುವ ತಪ್ಪಿತಸ್ಥ ಶಿಕ್ಷಕರು ಹಾಗೂ ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.
.













Leave a Reply