ಲಕ್ನೋ: ಅಯೋಧ್ಯೆಯ ಪವಿತ್ರ ರಾಮಮಂದಿರದಲ್ಲಿ (Ram Mandir) ಭಕ್ತರು ಸಮರ್ಪಿಸಿದ ದೇಣಿಗೆ ಮತ್ತು ಕಾಣಿಕೆಗಳ ಎಣಿಕೆ ಕೋಣೆಯಲ್ಲಿ ನಡೆದ ಕಳ್ಳತನ ಪ್ರಕರಣಗಳ ಕುರಿತು ವಿಶೇಷ ತನಿಖಾ ತಂಡ (SIT) ನಡೆಸಿರುವ ತನಿಖೆಯಿಂದ ಬೆಚ್ಚಿಬೀಳಿಸುವ ಸತ್ಯಗಳು ಹೊರಬಂದಿವೆ. ಕೇವಲ 42 ದಿನಗಳ ಅವಧಿಯಲ್ಲಿ ಬರೋಬ್ಬರಿ 70 ಬಾರಿ ಕಳ್ಳತನಗಳು ನಡೆದಿರುವ ಬಗ್ಗೆ ಎಸ್ಐಟಿಗೆ ಬಲವಾದ ಸಾಕ್ಷ್ಯಾಧಾರಗಳು ಲಭ್ಯವಾಗಿವೆ ಎಂದು ಮೂಲಗಳು ತಿಳಿಸಿವೆ.
ದೇಣಿಗೆ ದುರುಪಯೋಗದ ಕುರಿತು ದೂರು ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡಿದ್ದ ಎಸ್ಐಟಿ, ಏಪ್ರಿಲ್ 27 ರಿಂದ ಜೂನ್ 5 ರವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದೆ. ಈ ವೀಡಿಯೋ ಸಾಕ್ಷ್ಯಗಳ ಆಧಾರದ ಮೇಲೆಯೇ ಕಾಣಿಕೆ ಕೋಣೆಯಲ್ಲಿದ್ದ ಭದ್ರತಾ ಲೋಪವನ್ನು ಬಳಸಿಕೊಂಡು ಕಳ್ಳತನ ಎಸಗುತ್ತಿದ್ದ 8 ಮಂದಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿ, ಅವರನ್ನು ಬಂಧಿಸಲಾಗಿದೆ.
ಹಣಕಾಸು ವರ್ಷಗಳಾದ 2022-23, 2023-24 ಮತ್ತು 2024-25 ರ ಆಂತರಿಕ ಲೆಕ್ಕ ಪರಿಶೋಧನೆ (Audit Report) ವರದಿಗಳನ್ನು ಎಸ್ಐಟಿ ಪರಿಶೀಲಿಸಿದಾಗ ಹಣಕಾಸು ನಿರ್ವಹಣೆಯಲ್ಲಿ ಸಾಲು ಸಾಲು ನ್ಯೂನತೆಗಳು ಪತ್ತೆಯಾಗಿವೆ. ಮಂದಿರದ ಅಧಿಕೃತ ದಾಖಲೆಗಳು ಹಾಗೂ ಅಲ್ಲಿರುವ ಹುಂಡಿಗಳ ಸಂಖ್ಯೆಯ ನಡುವೆಯೂ ಭಾರಿ ವ್ಯತ್ಯಾಸಗಳು ಕಂಡುಬಂದಿವೆ.
ಮಂದಿರದ ಆವರಣದ ಸಿಸಿಟಿವಿ ವ್ಯಾಪ್ತಿ ಮತ್ತು ಕಟ್ಟುನಿಟ್ಟಿನ ಭದ್ರತಾ ಪ್ರೋಟೋಕಾಲ್ಗಳು ಕೇವಲ ಕಾಗದದ ಮೇಲಿದ್ದವೇ ವಿನಃ ಪ್ರಾಯೋಗಿಕವಾಗಿ ಯಾವುದೂ ಜಾರಿಯಾಗಿರಲಿಲ್ಲ ಎಂದು ಎಸ್ಐಟಿ ತನ್ನ ವರದಿಯಲ್ಲಿ ಅತ್ಯಂತ ಗಂಭೀರವಾಗಿ ಉಲ್ಲೇಖಿಸಿದೆ.

Leave a Reply