ಪಶ್ಚಿಮ ಘಟ್ಟಗಳು ಹಾಗೂ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ನದಿಗಳಾದ ಕೃಷ್ಣಾ, ಘಟಪ್ರಭಾ ಜಲಾನಯನ ಪ್ರದೇಶಗಳಲ್ಲಿ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ. ಜುಲೈ 9, 2026 ರ ಹೊತ್ತಿಗೆ ಕೃಷ್ಣಾ ನದಿಯ ಆಲಮಟ್ಟಿ ಜಲಾಶಯಕ್ಕೆ 131,940 ಕ್ಯೂಸೆಕ್ ಭಾರಿ ಒಳಹರಿವು ದಾಖಲಾಗಿದೆ.
ಕೇವಲ 24 ಗಂಟೆಗಳಲ್ಲಿ ಸುಮಾರು 10 ಟಿಎಂಸಿ ನೀರು ಹರಿದುಬಂದಿದ್ದು, 123.081 ಟಿಎಂಸಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 44.695 ಟಿಎಂಸಿ ನೀರು ಸಂಗ್ರಹವಾಗಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಜಲಾಶಯ ಭರ್ತಿಯಾಗುತ್ತಿರುವುದರಿಂದ ಕೇವಲ 483 ಕ್ಯೂಸೆಕ್ ನೀರನ್ನು ಮಾತ್ರ ಹೊರಬಿಡಲಾಗುತ್ತಿದೆ. ನೀರಾವರಿ ಹಾಗೂ ಪ್ರವಾಹ ನಿಯಂತ್ರಣದ ದೃಷ್ಟಿಯಿಂದ ಈ ನೀರಿನ ನಿರ್ವಹಣೆ ಅತ್ಯಂತ ಮಹತ್ವದ್ದಾಗಿದೆ.
ಇದೇ ವೇಳೆ, ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್ಗೂ ನೀರಿನ ಹರಿವು ತೀವ್ರಗೊಂಡಿದೆ. ಬ್ಯಾರೇಜ್ಗೆ ಸದ್ಯ 1,19,800 ಕ್ಯೂಸೆಕ್ ಒಳಹರಿವು ಇದ್ದು, ಅಷ್ಟೇ ಪ್ರಮಾಣದ ಅಂದರೆ 1,19,250 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಗರಿಷ್ಠ 6 ಟಿಎಂಸಿ ಸಾಮರ್ಥ್ಯದ ಈ ಬ್ಯಾರೇಜ್ನಲ್ಲಿ ನೀರಿನ ಮಟ್ಟ 522.05 ಮೀಟರ್ ತಲುಪಿದ್ದು, 3.54 ಟಿಎಂಸಿ ನೀರು ಸಂಗ್ರಹವಾಗಿದೆ.
ಮತ್ತೊಂದೆಡೆ, ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೂ ಒಳಹರಿವು ಹೆಚ್ಚಾಗಿದೆ. ಗರಿಷ್ಠ 2284.00 ಅಡಿ ಮಟ್ಟದ ಈ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ 2264.53 ಅಡಿಗಳಿಗೆ ತಲುಪಿದೆ. ಜಲಾಶಯಕ್ಕೆ 14,574 ಕ್ಯೂಸೆಕ್ ಒಳಹರಿವು ಇದ್ದು, 500 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಒಟ್ಟು 19.52 ಟಿಎಂಸಿ ಗರಿಷ್ಠ ಸಾಮರ್ಥ್ಯದಲ್ಲಿ ಸದ್ಯ 9.16 ಟಿಎಂಸಿ ನೀರು ಸಂಗ್ರಹವಾಗಿದೆ.
ವಿದ್ಯುತ್ ಸಂಪರ್ಕ ಕಳೆದುಕೊಂಡ ಗ್ರಾಮಗಳು
ಮಳೆರಾಯನ ಅಬ್ಬರ ಜಲಾಶಯಗಳಿಗೆ ಜೀವಕಳೆ ತಂದಿದ್ದರೆ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಮಾತ್ರ ಭಾರೀ ಅವಾಂತರ ಸೃಷ್ಟಿಸಿದೆ. ನಿರಂತರ ಮಳೆಯಿಂದಾಗಿ ಭೀಮಗಡ, ಕಣಕುಂಬಿ ಹಾಗೂ ಜಾಂಬೋಟಿ ಅರಣ್ಯ ಭಾಗದ 25 ಕ್ಕೂ ಹೆಚ್ಚು ಗ್ರಾಮಗಳು ಕಳೆದ 6 ದಿನಗಳಿಂದ ವಿದ್ಯುತ್ ಸಂಪರ್ಕ ಕಳೆದುಕೊಂಡು ಕಗ್ಗತ್ತಲಿನಲ್ಲಿ ಮುಳುಗಿವೆ. ಮೊಬೈಲ್ ಚಾರ್ಜಿಂಗ್ ಮಾಡಲು ಕೂಡ ಸ್ಥಳೀಯರು 20 ರಿಂದ 30 ಕಿಲೋಮೀಟರ್ ದೂರದ ಪಟ್ಟಣಗಳಿಗೆ ಅಲೆಯುವಂತಹ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ಮಳೆಗಾಲದಲ್ಲೂ ಇದೇ ರೀತಿ ಸಂಕಷ್ಟ ಎದುರಿಸುತ್ತಿದ್ದರೂ ಸೂಕ್ತ ಮೂಲಸೌಕರ್ಯ ಒದಗಿಸುವಲ್ಲಿ ವಿಫಲರಾಗಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Leave a Reply