ಕೆಲಸ ಕೊಡಿಸುವುದಾಗಿ ನಂಬಿಸಿ ಹೊರರಾಜ್ಯದ ಅಮಾಯಕ ಯುವತಿಯರನ್ನು ಕರೆತಂದು, ಹಣದ ಆಮಿಷ ಹಾಗೂ ಬೆದರಿಕೆ ಒಡ್ಡಿ ವೇಶ್ಯಾ*ವಾಟಿಕೆ ದಂಧೆಗೆ ತಳ್ಳುತ್ತಿದ್ದ ಭೀಕರ ಜಾಲವೊಂದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ನೆಲಮಂಗಲ ಸಮೀಪದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಸ್ಕೂರಿನಲ್ಲಿರುವ ‘ಗಾಯಿತ್ರಿ ಲಾಡ್ಜ್’ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ ಈ ಅನೈತಿಕ ದಂಧೆಯನ್ನು ಮಟ್ಟಹಾಕಿದ್ದಾರೆ. ಉದ್ಯೋಗದ ಹುಡುಕಾಟದಲ್ಲಿರುವ ಹೊರರಾಜ್ಯಗಳ ಯುವತಿಯರನ್ನೇ ಈ ಜಾಲ ಪ್ರಮುಖವಾಗಿ ಟಾರ್ಗೆಟ್ ಮಾಡುತ್ತಿತ್ತು ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.
ಕುಖ್ಯಾತ ಪಿಂಪ್ ಚೇತನ್ ಕುಮಾರ್ ಬಂಧನ
ದಾಳಿಯ ವೇಳೆ ದಂಧೆಯ ಮುಖ್ಯಸ್ಥ, ಕುಖ್ಯಾತ ಪಿಂಪ್ ಆಗಿರುವ 40 ವರ್ಷದ ಚೇತನ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇವನ ವಶದಲ್ಲಿದ್ದ ಹೊರರಾಜ್ಯದ ಯುವತಿಯರನ್ನು ಪೊಲೀಸರು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಬಂಧಿತ ಆರೋಪಿ ಚೇತನ್ ಕುಮಾರ್ ಹಳೇ ಅಪರಾಧಿಯಾಗಿದ್ದು, ಈತನ ವಿರುದ್ಧ ಈಗಾಗಲೇ ಮಾದನಾಯಕನಹಳ್ಳಿ ಠಾಣೆಯಲ್ಲಿ ಎರಡು, ಪೀಣ್ಯ ಮತ್ತು ಬಾಗಲಗುಂಟೆ ಪೊಲೀಸ್ ಠಾಣೆಗಳಲ್ಲಿ ತಲಾ ಒಂದೊಂದು ಸೇರಿದಂತೆ ಹಲವು ದೂರುಗಳು ದಾಖಲಾಗಿವೆ.
ಸಿಸಿಬಿ ದಾಳಿಯ ಬಳಿಕವೂ ಮುಂದುವರಿದಿದ್ದ ದಂಧೆ!
ವಿಶೇಷವೆಂದರೆ, ಇದೇ ಹುಸ್ಕೂರಿನ ಗಾಯಿತ್ರಿ ಲಾಡ್ಜ್ ಮೇಲೆ ಈ ಹಿಂದೆ ಕೇಂದ್ರ ಅಪರಾಧ ವಿಭಾಗದ (CCB) ಪೊಲೀಸರು ದಾಳಿ ನಡೆಸಿ ದಂಧೆಯನ್ನು ಪತ್ತೆಹಚ್ಚಿ ಯುವತಿಯರನ್ನು ರಕ್ಷಿಸಿದ್ದರು. ಆದಾಗ್ಯೂ, ಪೊಲೀಸರ ಕಣ್ಣು ತಪ್ಪಿಸಿ ಅದೇ ಲಾಡ್ಜ್ನಲ್ಲಿ ಮತ್ತೆ ದಂಧೆಯನ್ನು ರಾಜಾರೋಷವಾಗಿ ಮುಂದುವರಿಸಲಾಗಿತ್ತು. ಈ ಬಗ್ಗೆ ನಿಖರ ಮಾಹಿತಿ ಕಲೆಹಾಕಿದ ಮಾದನಾಯಕನಹಳ್ಳಿ ಪೊಲೀಸರು ಮತ್ತೊಮ್ಮೆ ದಾಳಿ ನಡೆಸಿ ಜಾಲವನ್ನು ಧ್ವಂಸಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ಪ್ರಕರಣ ದಾಖಲಾಗಿದ್ದು, ಲಾಡ್ಜ್ ಮಾಲೀಕರು ಹಾಗೂ ದಂಧೆಯ ಹಿಂದಿರುವ ಇತರರ ವಿರುದ್ಧ ತನಿಖೆ ಚುರುಕುಗೊಂಡಿದೆ.

Leave a Reply