ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಪುಟ (DK Cabinet) ಸೇರಲು ಕಾಂಗ್ರೆಸ್ ಪಾಳಯದಲ್ಲಿ ಭಾರಿ ಕಸರತ್ತು ನಡೆಯುತ್ತಿದ್ದು, ಇದರ ಮಧ್ಯೆಯೇ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಅವರು ಹಿರಿಯ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸಂಧಾನ ನಡೆಸಿದ್ದಾರೆ. ನಿನ್ನೆಯಷ್ಟೇ ತಮ್ಮ ವಿರುದ್ಧ ಸಿದ್ದರಾಮಯ್ಯ (Siddaramaiah) ಅವರು ತೀವ್ರ ಅಸಮಾಧಾನ ಹೊರಹಾಕಿದ್ದರಿಂದ ಆತಂಕಗೊಂಡಿರುವ ಜಮೀರ್, ಇಂದು ಬೆಳ್ಳಂಬೆಳಗ್ಗೆ ಸಿದ್ದರಾಮಯ್ಯ ಅವರ ನಿವಾಸಕ್ಕೆ ಓಡಿ ಬಂದು ಸುದೀರ್ಘ ಚರ್ಚೆ ನಡೆಸಿದ್ದಾರೆ.
ಭೇಟಿಯ ವೇಳೆ ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಲು ಯತ್ನಿಸಿದ ಜಮೀರ್ ಅಹ್ಮದ್, “ನಾನು ಕನಸು ಮನಸಿನಲ್ಲೂ ನಿಮ್ಮ ವಿರುದ್ಧ ಕೆಲಸ ಮಾಡಿಲ್ಲ. ನಾನು ನಿಮ್ಮ ಮನೆ ಮಗನ ಇದ್ದಂತೆ, ನಿಮ್ಮ ಬಗ್ಗೆ ಎಂದಿಗೂ ಕೆಟ್ಟದಾಗಿ ಯೋಚಿಸುವುದಿಲ್ಲ. ನಾನೇನಾದರೂ ತಪ್ಪು ಮಾಡಿದ್ದರೆ ದೊಡ್ಡ ಗುಣ ಮಾಡಿ ನೀವೇ ತಿದ್ದಬೇಕು,” ಎಂದು ಭಾವುಕರಾಗಿ ಶರಣಾಗಿದ್ದಾರೆ. ಡಿಕೆಶಿ ಸಂಪುಟ ವಿಸ್ತರಣೆ ವೇಳೆ ಸಿದ್ದರಾಮಯ್ಯ ಅವರ ಬೆಂಬಲ ಅತ್ಯಗತ್ಯವಾಗಿರುವುದರಿಂದ ಜಮೀರ್ ಅವರ ಈ ದಿಢೀರ್ ಮನವೊಲಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Leave a Reply