ಬೆಂಗಳೂರಿನಲ್ಲಿ ನವವಿವಾಹಿತೆ ಆತ್ಮಹ*ತ್ಯೆ: ಕಿರುಕುಳಕ್ಕೆ ಬೇಸತ್ತು DeathNote ಬರೆದಿಟ್ಟು ನೇಣಿಗೆ ಶರಣಾದ ಶಿಕ್ಷಕಿ!

ಹಂಚಿಕೊಳ್ಳಿ

ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದಕಟ್ಟೆಯಲ್ಲಿ ನವವಿವಾಹಿತೆಯೊಬ್ಬರು ಮನೆಯ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಮೃ*ತ ದುರ್ದೈವಿಯನ್ನು ಶ್ವೇತಾ (25) ಎಂದು ಗುರುತಿಸಲಾಗಿದೆ. ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ವೇತಾ, ಕೇವಲ ನಾಲ್ಕು ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಪತಿಯ ಮನೆಯವರ ಕಿರುಕುಳ ತಾಳಲಾರದೆ ರಾತ್ರಿ ವೇಳೆ ತಮ್ಮ ನಿವಾಸದಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.

ಆತ್ಮಹ*ತ್ಯೆಗೂ ಮುನ್ನ ಶ್ವೇತಾ ಅವರು ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ತನ್ನ ಸಾ*ವಿಗೆ ಗಂಡ, ಅತ್ತೆ ಹಾಗೂ ಗಂಡನ ಅಕ್ಕನ ಕಿರುಕುಳವೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ. ತನ್ನ ತಾಯಿಯನ್ನು ಉಲ್ಲೇಖಿಸಿ ಪತ್ರ ಬರೆದಿರುವ ಶ್ವೇತಾ, “ಅವರಿಂದ ನನಗೆ ತೀವ್ರ ಹಿಂಸೆಯಾಗುತ್ತಿದೆ. ಬದುಕುವ ಆಸೆಯೇ ಇಲ್ಲದಂತೆ ಮಾಡಿದ್ದಾರೆ. ನಾನು ಸ*ತ್ತರೆ ಅವರನ್ನು ಮಾತ್ರ ಸುಮ್ಮನೆ ಬಿಡಬೇಡಿ ಅಮ್ಮ.. ನನ್ನಿಂದ ತಪ್ಪಾಯಿತು, ಕ್ಷಮಿಸಿಬಿಡು” ಎಂದು ಹೃದಯವಿದ್ರಾವಕವಾಗಿ ಬರೆದುಕೊಂಡಿದ್ದಾರೆ.

ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃ*ತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿರುವ ಪೊಲೀಸರು, ಡೆತ್ ನೋಟ್ ಆಧರಿಸಿ ಶ್ವೇತಾ ಅವರ ಪತಿ ಹಾಗೂ ಅತ್ತೆಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮದುವೆಯಾದ ಕೇವಲ ನಾಲ್ಕೇ ತಿಂಗಳಿಗೆ ಶಿಕ್ಷಕಿಯಾಗಿದ್ದ ಮಗಳು ಶ*ವವಾಗಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

 

Leave a Reply

Your email address will not be published. Required fields are marked *

Advertisement


This will close in 3 seconds