ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರರನ್ನಾಗಿ (Chief Advisor) ಪ್ರಖ್ಯಾತ ಚುನಾವಣಾ ತಂತ್ರಜ್ಞ ಸುನಿಲ್ ಕನುಗೋಳು ಅವರನ್ನು ನೇಮಕ ಮಾಡಿ ಕರ್ನಾಟಕ ಸರ್ಕಾರವು ಅಧಿಕೃತ ಆದೇಶ ಹೊರಡಿಸಿದೆ. ಈ ನೂತನ ಜವಾಬ್ದಾರಿಯ ಜೊತೆಗೆ ಆಡಳಿತಾತ್ಮಕವಾಗಿ ಅವರಿಗೆ ಸಂಪುಟ ದರ್ಜೆಯ ಸಚಿವರ (Cabinet Rank) ಸ್ಥಾನಮಾನವನ್ನು ನೀಡಿ ಗೌರವಿಸಲಾಗಿದೆ.
ದಿನಾಂಕ 08.06.2026 ರಂದು ರಾಜ್ಯ ಸರ್ಕಾರದ ಸಚಿವಾಲಯವು ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಬೆಂಗಳೂರಿನ ಜೆ.ಪಿ. ನಗರ 4ನೇ ಹಂತ, ಬನ್ನೇರುಘಟ್ಟ ರಸ್ತೆಯಲ್ಲಿರುವ (ಬಿ.ಜಿ ರಸ್ತೆ) ನಿವಾಸಿಯಾಗಿರುವ ಸುನಿಲ್ ಕನುಗೋಳು ಅವರ ನೇಮಕಾತಿಯು ತಕ್ಷಣದಿಂದಲೇ ಜಾರಿಗೆ ಬರುವಂತೆ ಅನ್ವಯವಾಗಿದೆ. ನೂತನ ಸರ್ಕಾರದ ಯೋಜನೆಗಳು, ಕಾರ್ಯತಂತ್ರಗಳು ಹಾಗೂ ನೀತಿ ನಿರೂಪಣೆಗಳಲ್ಲಿ ಇವರ ಪಾತ್ರ ಅತ್ಯಂತ ಪ್ರಮುಖವಾಗಿರಲಿದ್ದು, ಮುಂದಿನ ಆದೇಶದವರೆಗೆ ಅವರು ಈ ಪ್ರತಿಷ್ಠಿತ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ಈ ಮಹತ್ವದ ನೇಮಕಾತಿಯ ಅನ್ವಯ, ಸುನಿಲ್ ಕನುಗೋಳು ಅವರು ಸಂಪುಟ ದರ್ಜೆಯ ಸಚಿವರಿಗೆ ಲಭ್ಯವಿರುವ ಎಲ್ಲಾ ರೀತಿಯ ಭತ್ಯೆಗಳು, ಆಡಳಿತಾತ್ಮಕ ಸೌಲಭ್ಯಗಳು ಮತ್ತು ಸವಲತ್ತುಗಳನ್ನು ಪಡೆಯಲಿದ್ದಾರೆ. ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಹಾಗೂ ಅವರ ಹೆಸರಿನಲ್ಲಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ರಾಜ್ಯ ಶಿಷ್ಟಾಚಾರ) ಸರ್ಕಾರದ ಅಧೀನ ಕಾರ್ಯದರ್ಶಿ ಬಾನಂದರಂಗಯ್ಯ ಎನ್.ಆರ್. ಅವರು ಈ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದಾರೆ.


Leave a Reply