ಲಕ್ಷ್ಮೀದೇವಿ ಬಗ್ಗೆ ವಿವಾದಾತ್ಮಕ ಹೇಳಿಕೆ: ಜ್ಯೋತಿಷಿ ಆರ್ಯವರ್ಧನ್ ಗುರೂಜಿ ವಿರುದ್ಧ ಪೊಲೀಸ್ ದೂರು, ವಿಚಾರಣೆಗೆ ಬುಲಾವ್!

ಹಂಚಿಕೊಳ್ಳಿ

ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಂದರ್ಶನವೊಂದರಲ್ಲಿ ಲಕ್ಷ್ಮೀದೇವಿಯ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಪ್ರಸಿದ್ಧ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. ಅವರ ವಿವಾದಾತ್ಮಕ ಹೇಳಿಕೆಯಿಂದ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆಯಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಶಂಕರಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂದರ್ಶನದಲ್ಲಿ ವಿವಾದಾತ್ಮಕ ಹೇಳಿಕೆ

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಆರ್ಯವರ್ಧನ್ ಗುರೂಜಿ, ಲಕ್ಷ್ಮೀದೇವಿಯ ಕುರಿತು ಆಕ್ಷೇಪಾರ್ಹವಾಗಿ ಮಾತನಾಡಿದ್ದರು ಎನ್ನಲಾಗಿದೆ. ಮನುಷ್ಯನ ನಿರ್ದಿಷ್ಟ ಅಂಗಾಂಗವೊಂದನ್ನು ಉಲ್ಲೇಖಿಸಿ, ಆ ಅಂಗಾಂಗಕ್ಕೆ ಪೂಜೆ ಮಾಡಬೇಕು ಎಂಬರ್ಥದಲ್ಲಿ ಅವರು ನೀಡಿದ್ದ ಹೇಳಿಕೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಪೂಜನೀಯ ದೇವರ ಬಗ್ಗೆ ಇಂತಹ ಹಗುರವಾದ ಹಾಗೂ ಅವಹೇಳನಕಾರಿ ಮಾತುಗಳನ್ನು ಆಡಿರುವುದು ಸಾರ್ವಜನಿಕರ ಮತ್ತು ಭಕ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಮಹಿಳೆಯರ ಗೌರವಕ್ಕೆ ಅಪಮಾನವೆಂದು ದೂರು

ಗುರೂಜಿಯವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ‘ಕರ್ನಾಟಕ ಗೋವು ರಕ್ಷಕರ ಸೇನೆ’ಯ ಸುಮನ್ ಎಂಬುವವರು ಶಂಕರಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರ್ಯವರ್ಧನ್ ಗುರೂಜಿ ಅವರ ಈ ಹೇಳಿಕೆಯು ಕೇವಲ ಹಿಂದೂ ದೇವರಿಗೆ ಮಾಡಿದ ಅಪಮಾನವಲ್ಲ, ಬದಲಿಗೆ ಇಡೀ ಮಹಿಳಾ ಸಂಕುಲದ ಗೌರವಕ್ಕೆ ಮಾಡಿರುವ ಘೋರ ಅಪಮಾನವಾಗಿದೆ. ಇದರಿಂದ ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಕೂಡಲೇ ಗುರೂಜಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಒತ್ತಾಯಿಸಿದ್ದಾರೆ.

ವಿಚಾರಣೆಗೆ ಹಾಜರಾಗಲು ಪೊಲೀಸರ ಸೂಚನೆ

ಗೋವು ರಕ್ಷಕರ ಸೇನೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಶಂಕರಪುರಂ ಠಾಣೆಯ ಪೊಲೀಸರು ಪ್ರಕರಣವನ್ನು ಪರಿಗಣಿಸಿ ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ. ದೂರಿಗೆ ಸಂಬಂಧಿಸಿದಂತೆ ಆರ್ಯವರ್ಧನ್ ಗುರೂಜಿ ಅವರಿಗೆ ಮೌಖಿಕವಾಗಿ ನೋಟಿಸ್ ನೀಡಿರುವ ಪೊಲೀಸರು, ಕೂಡಲೇ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಬುಲಾವ್ ನೀಡಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds