Mandya ಜೈಲಿನಲ್ಲಿ ಪೊಲೀಸರ ದಿಢೀರ್ ದಾಳಿ: ಗಾಂಜಾ, ಸಿಗರೇಟ್ ಜೊತೆಗೆ ಪೆನ್ ಕ್ಯಾಮೆರಾ ಪತ್ತೆ!

ಹಂಚಿಕೊಳ್ಳಿ

ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳು ರಾಜಾರೋಷವಾಗಿ ಗಾಂಜಾ ಹಾಗೂ ಸಿಗರೇಟ್ ಬಳಸುತ್ತಿರುವ ಆಘಾತಕಾರಿ ವಿಚಾರ ಪೊಲೀಸರು ನಡೆಸಿದ ದಿಢೀರ್ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ವಿ.ಜೆ. ಶೋಭಾರಾಣಿ ಅವರ ನೇತೃತ್ವದಲ್ಲಿ ನೂರಾರು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೊಳಗೊಂಡ ಬೃಹತ್ ತಂಡವು ಜೈಲಿನ ಮೇಲೆ ದಿಢೀರ್ ದಾಳಿ ನಡೆಸಿ ವ್ಯಾಪಕ ಶೋಧ ಕಾರ್ಯ (Search operation) ನಡೆಸಿದೆ.

ಪ್ರತಿ ಬ್ಯಾರಕ್‌ನಲ್ಲೂ ಪೊಲೀಸರ ತಲಾಷ್

ಬೆಳ್ಳಂಬೆಳಗ್ಗೆಯೇ ಕಾರ್ಯಾಚರಣೆಗಿಳಿದ ಪೊಲೀಸ್ ಪಡೆಗಳು, ಕಾರಾಗೃಹದ ಪ್ರತಿಯೊಂದು ಬ್ಯಾರಕ್‌ಗಳನ್ನು ತೀವ್ರವಾಗಿ ಜಾಲಾಡಿವೆ. ಬಿಗಿ ಭದ್ರತೆಯ ನಡುವೆಯೂ ಕಾರಾಗೃಹದೊಳಗೆ ಕೈದಿಗಳ ಕೈಗೆ ನಿಷೇಧಿತ ವಸ್ತುಗಳು ಸಲೀಸಾಗಿ ತಲುಪುತ್ತಿರುವುದು ಜೈಲು ಸಿಬ್ಬಂದಿ ಹಾಗೂ ಭದ್ರತಾ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪೆನ್ ಕ್ಯಾಮೆರಾ ಸೇರಿ ಮಾದಕ ವಸ್ತುಗಳ ಜಪ್ತಿ

ಪೊಲೀಸರ ತೀವ್ರ ತಪಾಸಣೆಯ ವೇಳೆ ಕೈದಿಗಳ ಬಳಿ ಇದ್ದ ಗಾಂಜಾ, ಸಿಗರೇಟ್, ತಂಬಾಕು ಉತ್ಪನ್ನಗಳು ಹಾಗೂ ಒಂದು ‘ಪೆನ್ ಕ್ಯಾಮೆರಾ’ (Pen Camera) ಪತ್ತೆಯಾಗಿದೆ. ಪತ್ತೆಯಾದ ಎಲ್ಲಾ ಮಾದಕ ವಸ್ತುಗಳು ಹಾಗೂ ಎಲೆಕ್ಟ್ರಾನಿಕ್ ಉಪಕರಣವನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಅಕ್ರಮದಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ಮಂಡ್ಯ ಎಸ್ಪಿ ಡಾ. ವಿ.ಜೆ. ಶೋಭಾರಾಣಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds