ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು 2026 ನೇ ಸಾಲಿನ ವೈದ್ಯಾಧಿಕಾರಿಗಳ ವರ್ಗಾವಣೆ ಕುರಿತು ದಿನಾಂಕ 11/06/2026 ರಂದು ಅಧಿಕೃತ ಜ್ಞಾಪನಾ ಪತ್ರವನ್ನು ಹೊರಡಿಸಿದೆ. ಈ ಆದೇಶದನ್ವಯ ಉಪ ಮುಖ್ಯ ವೈದ್ಯಾಧಿಕಾರಿಗಳು, ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳು, ಹಿರಿಯ ವೈದ್ಯಾಧಿಕಾರಿಗಳು ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳಿಗೆ ಆನ್ಲೈನ್ ಸಮಾಲೋಚನೆಯ ಮೂಲಕ ಆಯ್ಕೆ ಮಾಡಿಕೊಂಡಂತೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಕಾಯ್ದೆ ನಿಯಮಾವಳಿಗಳ ಅಡಿಯಲ್ಲಿ ವಿಶೇಷ ಪ್ರಕರಣಗಳಿಗಾಗಿ ದಿನಾಂಕ 03-06-2026 ರಂದು ಹಾಗೂ ಸಾರ್ವಜನಿಕ ಹಿತಾಸಕ್ತಿ ಮತ್ತು ಇತರೆ ವಿಶೇಷ ಪ್ರಕರಣಗಳಡಿ ಬರುವ ವೈದ್ಯಾಧಿಕಾರಿಗಳಿಗೆ ದಿನಾಂಕ 06-06-2026 ರಂದು ಆನ್ಲೈನ್ ಮೂಲಕ ಸಮಾಲೋಚನೆ ನಡೆಸಲಾಗಿತ್ತು.

ಸಾರ್ವಜನಿಕ ಹಿತಾಸಕ್ತಿ ಮೇರೆಗೆ ವರ್ಗಾವಣೆಗೊಂಡಿರುವ ವೈದ್ಯಾಧಿಕಾರಿಗಳು ನಿಯಮಾನುಸಾರ ಸೇರಿಕೆ ಕಾಲ ಹಾಗೂ ವರ್ಗಾವಣೆ ಭತ್ಯೆ ಪಡೆಯಲು ಅರ್ಹರಿರುತ್ತಾರೆ. ಆದರೆ ವಿಶೇಷ ಪ್ರಕರಣಗಳ ಅಡಿಯಲ್ಲಿ ಕೋರಿಕೆ ವರ್ಗಾವಣೆ ಪಡೆದ ವೈದ್ಯರು ಸೇರಿಕೆ ಕಾಲ ಹಾಗೂ ವರ್ಗಾವಣೆ ಭತ್ಯೆಗೆ ಅರ್ಹರಿರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಸಮಾಲೋಚನೆ ಮೂಲಕ ವರ್ಗಾವಣೆಗೊಂಡು ನಿಯುಕ್ತಿಗೊಳಿಸಿರುವ ಸ್ಥಳಕ್ಕೆ ವರದಿ ಮಾಡಿಕೊಳ್ಳದೇ ಇದ್ದಲ್ಲಿ ನಿಯಮಾನುಸಾರ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ವರ್ಗಾವಣೆಗೊಂಡಿರುವ ವೈದ್ಯಾಧಿಕಾರಿಗಳನ್ನು ಕೂಡಲೇ ಸಂಬಂಧಪಟ್ಟ ಸರ್ಕಾರಿ ಆಸ್ಪತ್ರೆ ಅಥವಾ ಕಚೇರಿಯ ಮುಖ್ಯಸ್ಥರು ತಕ್ಷಣ ಅಥವಾ ಆದೇಶ ಹೊರಬಿದ್ದ 07 ದಿನಗಳ ಒಳಗಾಗಿ ಕರ್ತವ್ಯದಿಂದ ಬಿಡುಗಡೆ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಲ್ಲದೇ, ಅಧಿಕಾರಿಗಳು ಕರ್ತವ್ಯದಿಂದ ಬಿಡುಗಡೆಗೊಂಡು ಹೊಸ ಸ್ಥಳಕ್ಕೆ ವರದಿ ಮಾಡಿಕೊಂಡಿರುವ ಬಗ್ಗೆ ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು 8 ದಿನಗಳ ಒಳಗೆ ಆಯುಕ್ತಾಲಯಕ್ಕೆ ವರದಿ ಸಲ್ಲಿಸಬೇಕಿದೆ.
ವರ್ಗಾವಣೆ ಕುರಿತು ಯಾವುದೇ ಆಕ್ಷೇಪಣೆ ಅಥವಾ ಮೇಲ್ಮನವಿಗಳಿದ್ದರೆ, ಅಧಿಕಾರಿಗಳು ಇಲಾಖಾ ಅಂತರ್ಜಾಲದಲ್ಲಿ ಪ್ರಚುರಪಡಿಸಿರುವ ಗೂಗಲ್ ಫಾರ್ಮ್ ಲಿಂಕ್ ಮೂಲಕ ದಿನಾಂಕ 07-07-2026 ರ ಸಂಜೆ 05:30 ರ ಒಳಗೆ ಅಥವಾ ಆದೇಶ ಹೊರಡಿಸಿದ 30 ದಿನಗಳ ಒಳಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.


Leave a Reply