ಬೆಂಗಳೂರು: ಮಧ್ಯಪ್ರಾಚ್ಯ ಸಂಘರ್ಷ ಹಾಗೂ ಯುದ್ಧದ ಭೀತಿಯ ಪರಿಣಾಮ ಇದೀಗ ನೇರವಾಗಿ ಸಾಮಾನ್ಯ ಜನರ ಅಡುಗೆ ಮನೆ ಹಾಗೂ ಹೋಟೆಲ್ ಉದ್ಯಮದ ಮೇಲೆ ತಟ್ಟಲಾರಂಭಿಸಿದೆ. ವಾಣಿಜ್ಯ ಬಳಕೆಯ ಎಲ್ಪಿಜಿ (Commercial LPG) ಸಿಲಿಂಡರ್ ದರ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಬೆಂಗಳೂರಿನ ಬಹುತೇಕ ಹೋಟೆಲ್ಗಳಲ್ಲಿ ಊಟ, ತಿಂಡಿ, ಕಾಫಿ ಮತ್ತು ಚಹಾ ದರಗಳನ್ನು ಹೆಚ್ಚಿಸಲು ಮಾಲೀಕರು ಸಜ್ಜಾಗಿದ್ದಾರೆ.
ಈಗಾಗಲೇ ಕೆಲವು ಹೋಟೆಲ್ಗಳು ದರ ಏರಿಕೆ ಮಾಡಿದ್ದರೆ, ಇನ್ನುಳಿದ ಹೋಟೆಲ್ಗಳು ಇದೇ ವಾರದಿಂದಲೇ ಹೊಸ ದರ ಪಟ್ಟಿಯನ್ನು (ಮೆನು) ಜಾರಿಗೆ ತರಲು ಮುಂದಾಗಿವೆ.

ಗಗನಕ್ಕೇರಿದ ಕಮರ್ಷಿಯಲ್ ಗ್ಯಾಸ್ ದರ
ಕಳೆದ ಮೂರು ತಿಂಗಳ ಅವಧಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೋಟೆಲ್ ಉದ್ಯಮದ ಮೇಲೆ ಬಿದ್ದಿರುವ ಆರ್ಥಿಕ ಹೊರೆಯ ವಿವರ ಇಲ್ಲಿದೆ:
- ಕಳೆದ 3 ತಿಂಗಳಲ್ಲಿ ಏರಿಕೆ: ಬರೋಬ್ಬರಿ 1,240 ರೂ.
- ಕಳೆದ ತಿಂಗಳ ಹೆಚ್ಚಳ: 991 ರೂ.
- ಜೂನ್ 1ರ ದರ ಏರಿಕೆ: 46 ರೂ.
- ಮುಂದಿನ ದಿನಗಳ ಆತಂಕ: ಸದ್ಯ 3,198 ರೂ.ಗೆ ಮಾರಾಟವಾಗುತ್ತಿರುವ ಸಿಲಿಂಡರ್ ಬೆಲೆ ಶೀಘ್ರದಲ್ಲೇ 4,000 ರೂ. ತಲುಪುವ ಮುನ್ಸೂಚನೆ ಇದ್ದು, ಮುಂದಿನ ದಿನಗಳಲ್ಲಿ ಮತ್ತೆ 800 ರೂ. ಹೆಚ್ಚಳವಾಗುವ ಸಾಧ್ಯತೆಯಿದೆ.
ದರ ಏರಿಕೆ ಅನಿವಾರ್ಯ: ಹೋಟೆಲ್ ಮಾಲೀಕರ ಅಳಲು
ಗ್ಯಾಸ್ ದರ ಏರಿಕೆಯಿಂದಾಗಿ ಹೋಟೆಲ್ ಉದ್ಯಮ ನಡೆಸುವುದು ಕಷ್ಟವಾಗಿದ್ದು, ನಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
“ಗ್ಯಾಸ್ ಬಳಸದೇ ಅಡುಗೆ ಮಾಡಲು ಸಾಧ್ಯವಿಲ್ಲ. ಈಗಾಗಲೇ ರೈಸ್ ಬಾತ್ ದರವನ್ನು 30 ರೂ.ನಿಂದ 40 ರೂ.ಗೆ ಏರಿಸಲಾಗಿದೆ. ಕಮರ್ಷಿಯಲ್ ಗ್ಯಾಸ್ ಬೆಲೆ ಹೀಗೇ ಏರುತ್ತಿದ್ದರೆ ಉದ್ಯಮ ನಡೆಸುವುದು ಅಸಾಧ್ಯ. ಆದ್ದರಿಂದ ಅನಿವಾರ್ಯವಾಗಿ ಪ್ರತಿ ತಿಂಡಿಯ ಮೇಲೆ 5 ರಿಂದ 10 ರೂ.ವರೆಗೆ ದರ ಏರಿಕೆ ಮಾಡಲೇಬೇಕಾದ ಕಠಿಣ ಪರಿಸ್ಥಿತಿಯಲ್ಲಿದ್ದೇವೆ.”
– ಶ್ರೀನಿವಾಸ್ (ವಿಲ್ಸನ್ ಗಾರ್ಡನ್ ಟಿಫಿನ್ ಸೆಂಟರ್) ಮತ್ತು ಧನುಷ್ (ದೋಸೆ ಕ್ಯಾಂಪ್)
ಸಾನಿಧ್ಯ ಹೋಟೆಲ್ ಮ್ಯಾನೇಜರ್ ಯೋಗೇಶ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಗ್ಯಾಸ್ ದರ ಏರಿಕೆ ಮುಂದುವರಿದರೆ ಬೆಲೆ ಮತ್ತಷ್ಟು ಹೆಚ್ಚಿಸುವ ಸ್ಪಷ್ಟ ಸುಳಿವು ನೀಡಿದ್ದಾರೆ.
ಗ್ರಾಹಕರಿಗೆ ಬಿತ್ತು ಬರೆ; ತಿಂಡಿ-ಊಟದ ಹೊಸ ದರಗಳೆಷ್ಟು?
ಹೋಟೆಲ್ ತಿಂಡಿಗಳ ದರ ಏರಿಕೆಯಿಂದಾಗಿ ಕಚೇರಿ ನೌಕರರು, ಮಧ್ಯಮ ವರ್ಗದ ಕುಟುಂಬಗಳು ಹಾಗೂ ಬ್ಯಾಚುಲರ್ಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
-
- ಇಡ್ಲಿ-ವಡೆ, ದೋಸೆ: 5 ರಿಂದ 10 ರೂ. ಹೆಚ್ಚಳ.
- ಊಟ (Meals): 10 ರಿಂದ 20 ರೂ. ಏರಿಕೆ.
- ಕಾಫಿ-ಟೀ: 2 ರಿಂದ 3 ರೂ. ದುಬಾರಿ.
“ಹಿಂದೆ 40 ರೂ. ಇದ್ದ ಇಡ್ಲಿ ಈಗ 50 ರೂ. ಆಗಿದೆ. ನಮ್ಮ ಸಂಬಳ ಮಾತ್ರ ಹೆಚ್ಚುತ್ತಿಲ್ಲ, ನಿತ್ಯ ಊಟ-ತಿಂಡಿಗೆ 60 ರೂ. ಹೆಚ್ಚುವರಿ ಖರ್ಚಾಗುತ್ತಿರುವುದರಿಂದ ಒಂದು ಹೊತ್ತಿನ ಊಟ ಬಿಡುವ ಸ್ಥಿತಿ ಬಂದಿದೆ.”
– ಶಿವಕುಮಾರ್, ಗ್ರಾಹಕ
ಒಟ್ಟಾರೆಯಾಗಿ ಜಾಗತಿಕ ಮಟ್ಟದ ಯುದ್ಧದ ಎಫೆಕ್ಟ್ ಇದೀಗ ಸಿಟಿ ಜನರ ಜೇಬಿಗೆ ಕತ್ತರಿ ಹಾಕಿದ್ದು, ಹಸಿವಿನ ಮೇಲೆ ನೇರ ಬರೆ ಎಳೆದಿದೆ.


Leave a Reply